
ಕಾರವಾರ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರಕ್ಕೆ ಅನುಮತಿ ನೀಡಿದೆ.
ನೈಋತ್ಯ ರೈಲ್ವೆ ಹೊರಡಿಸಿರುವ ಅಧಿಸೂಚನೆಯಂತೆ ರೈಲು ಸಂಖ್ಯೆ 06591 ಯಶವಂತಪುರ–ಮಡಗಾಂವ್ (YPR–MAO) ಎಕ್ಸ್ಪ್ರೆಸ್ ಸ್ಪೆಷಲ್ ಸೆಪ್ಟೆಂಬರ್ 11ರಂದು (ಶುಕ್ರವಾರ) ಒಂದು ಟ್ರಿಪ್ ಸಂಚರಿಸಲಿದೆ. ರೈಲು ಯಶವಂತಪುರದಿಂದ ರಾತ್ರಿ 11.55ಕ್ಕೆ ಹೊರಟು ಮಡಗಾಂವ್ಗೆ ಸೆಪ್ಟೆಂಬರ್ 12ರಂದು ಸಂಜೆ 6.10ಕ್ಕೆ ತಲುಪಲಿದೆ.
ಹಿಂತಿರುಗುವ 06592 ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ (MAO–BNC) ಎಕ್ಸ್ಪ್ರೆಸ್ ಸ್ಪೆಷಲ್ ಸೆಪ್ಟೆಂಬರ್ 14ರಂದು (ಸೋಮವಾರ) ಒಂದು ಟ್ರಿಪ್ ಸಂಚರಿಸಲಿದೆ. ಈ ರೈಲು ಮಡಗಾಂವ್ನಿಂದ ಬೆಳಗ್ಗೆ 11 ಗಂಟೆಗೆ ಹೊರಟು ಸೆಪ್ಟೆಂಬರ್ 15ರಂದು ಬೆಳಗ್ಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ವಿಶೇಷ ರೈಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಹಾಗೂ ಯಶವಂತಪುರ, ಕೆಂಗೇರಿ, ಚನ್ನಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಪಡೀಲ್, ತೋಕೂರು, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಕಾನಕೋಣ ಮತ್ತು ಮಡಗಾಂವ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
