ವಿದ್ಯುತ್ ಬಿಲ್ ಬಾಕಿ; ಕರೆಂಟ್ ಕಟ್: ಕತ್ತಲಲ್ಲಿ ಇಂದಿರಾ ಕ್ಯಾಂಟೀನ್

ದಾಂಡೇಲಿ: ವಿದ್ಯುತ್ ಬಿಲ್ ತುಂಬದೇ ಇದ್ದ ಹಿನ್ನಲೆಯಲ್ಲಿ ಹೆಸ್ಕಾಂನವರು ನಗರದ ಇಂದಿರಾ ಕ್ಯಾಂಟೀನ್ಗೆ ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಅಂದು ಸಿದ್ದರಾಮಯ್ಯನವರ ನೇತೃತ್ವದ ಸರಕಾರವಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆಯವರ ವಿಶೇಷ ಪ್ರಯತ್ನದಡಿ ಮಂಜೂರುಗೊಂಡು ಆರಂಭವಾಗಿದ್ದ ನಗರದ ಇಂದಿರಾ ಕ್ಯಾಂಟೀನ್ ಬಹಳಷ್ಟು ಜನರಿಗೆ ಅನುಕೂಲ ಸಿಂಧುವಾಗಿತ್ತು. ಬಡವರಿಗೆ, ವಿದ್ಯಾರ್ಥಿಗಳಿಗೆ, ತರಕಾರಿ ಮಾರಲು ಬರುವ ಹಳ್ಳಿಯ ರೈತರಿಗೆ ತ್ಯಲ್ಪ ಮೊತ್ತದಲ್ಲಿ ಉಪಹಾರ, ಊಟ ಮಾಡಲು ಸಹಕಾರಿಯಾಗಿದ್ದ ಇದೇ ಇಂದಿರಾ ಕ್ಯಾಂಟೀನ್ ಕಳೆದ ಏ.28ರಿಂದ ಕರೆಂಟ್ ಇಲ್ಲದೇ ಕತ್ತಲಲ್ಲೆ ಸೇವೆ ನೀಡುತ್ತಾ ಬಂದಿದೆ.
ಕರೆಂಟ್ ಇಲ್ಲದಿರುವುದರಿಂದ ಉಪಹಾರ, ಅಡುಗೆ ತಯಾರಿಕೆಗೆ ಸಾಕಷ್ಟು ಕಷ್ಟವಾಗತೊಡಗಿದೆ. ಇಲ್ಲಿಯ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ತಮ್ಮ ತಮ್ಮ ಮನೆಯಲ್ಲಿಯೆ ಮಸಾಲೆ ಅರೆದು ಇಲ್ಲಿಗೆ ತರಬೇಕಾದ ಸ್ಥಿತಿಯಿದೆ. ಇನ್ನೂ ರಾತ್ರಿ ವೇಳೆಯಲ್ಲಿ ಊಟಕ್ಕೆ ಬರುವ ಗ್ರಾಹಕರಿಗೆ ತೊಂದರೆಯಾಗದಿರಲೆಂದು ಚಾರ್ಜರ್ ದೀಪ ಇಲ್ಲವೇ ಮೇಣದ ಬತ್ತಿ ಹಚ್ಚಿ ಊಟ ವಿತರಿಸಲಾಗುತ್ತದೆ.
ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಕೂಡಲೆ ವಿದ್ಯುತ್ ಬಿಲ್ ತುಂಬುವ ವ್ಯವಸ್ಥೆಯಾಗಲಿದೆ. ಮತ್ತೆ ಎಂದಿನಂತೆ ಇಂದಿರಾ ಕ್ಯಾಂಟೀನಿಗೆ ವಿದ್ಯುತ್ ಪೊರೈಕೆಯಾಗಲಿದೆ ಎಂದು ಇಂದಿರಾ ಕ್ಯಾಂಟೀನಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಗುರು ಅವರು ತಿಳಿಸಿದ್ದಾರೆ.